ಕವಿತೆಯ ದಿನದ ನೆಪದಲ್ಲಿ ಮಿಸ್ತ್ರಾಲ್

ನಾವು ಅನೇಕ ತಪ್ಪುಗಳನ್ನು ಮಾಡಬಹುದು. ಆದರೆ ಮಕ್ಕಳ ಬಗ್ಗೆ ಅಸಡ್ಡೆ ತೋರುವುದು ಎಲ್ಲಕ್ಕಿಂತ ದೊಡ್ಡ ಅಪರಾಧ, ಜೀವನದ ತಳಹದಿಯ ಬಗ್ಗೆಯೇ ತಳೆವ ಉದಾಸೀನ. ಮಾಡಬೇಕಾದ ಅನೇಕ ಕೆಲಸಗಳನ್ನು ಆಮೇಲೆ ಮಾಡಿದರಾಯಿತು ಅಂತ ಮುಂದೆ ತಳ್ಳಬಹುದು. ಆದರೆ ಮಕ್ಕಳು ನಮಗಾಗಿ ಕಾಯುವುದಿಲ್ಲ. ಮಗುವಿನ ಮೂಳೆ ಬೆಳೆದು ಗಟ್ಟಿ ಆಗುತ್ತಿರುವುದು ಈಗ, ದೇಹದಲ್ಲಿ ರಕ್ತ ಉತ್ಪಾದನೆ ಆಗುತ್ತಿರುವುದು ಈಗ, ಪಂಚೇಂದ್ರಿಯಗಳು ಚುರುಕಾಗುತ್ತಿರುವುದು ಈಗ. ಮಗುವಿನ ಕರೆಗೆ “ನಾಳೆ ಬಾ” ಅನ್ನಲಾಗುವುದಿಲ್ಲ. ಯಾಕೆಂದರೆ ಕಂದನ ಹೆಸರೇ “ಇಂದು”

Read the rest of this entry »

Comments (2)

ಇಂದು ಮೂವತ್ತೊಂದು

ಒಂದಷ್ಟು ವಯಸ್ಸಾದ ಮೇಲೆ ಉರುಳುತ್ತಿರುವ ವರ್ಷಗಳತ್ತ ಬೊಟ್ಟು ಮಾಡುವ ಹೊಸವರ್ಷ, ಹುಟ್ಟು ಹಬ್ಬ ಇತ್ಯಾದಿ ಎಲ್ಲಾ ಮೈಲಿಗಲ್ಲುಗಳ ಮೇಲೂ ಒಂದು ದುಃಖದ ಛಾಯೆ ಇದ್ದೇ ಇರುತ್ತದೆ.

“ಯುಗಯುಗಾದಿ ಕಳೆದರೂ ಯುಗಾದ ಮರಳಿ ಬರುತಿದೆ…” ಅಂತ ಸಂಭ್ರಮಿಸುವ ಬೇಂದ್ರೆಯ ಹಾಡನ್ನೂ ಕೊನೆಯ ಸಾಲಿನಲ್ಲಿ ಆವರಿಸುವುದು ಈ ಛಾಯೆಯೇ. ಈ ವರ್ಷವಂತೂ  ಈ ಬಾಂಬ್ ಬೆದರಿಕೆಯ ದೆಸೆಯಿಂದಾಗಿ ಎಂ ಜಿ ರೋಡಿನಲ್ಲಿ ಕುಡಿದು, ಕುಣಿದು, ಕುಪ್ಪಳಿಸುವ ಇಪ್ಪತ್ತರ ಆಸುಪಾಸಿನ ಹೈಕಳಿಗೂ ಕೊಂಚ ದುಃಖದ ಛಾಯೆ ಆವರಿಸಿದಂತಿದೆ. ಪಾರ್ಟಿ ಮಾಡಿದರೂ ಈ ವರ್ಷ ಸಾವಿರಾರು ಪೋಲೀಸರ, ಡ್ರೋನ್ ಕ್ಯಾಮರಾಗಳ ಕಣ್ಗಾವಲಿನಲ್ಲಿ ಮಾಡಬೇಕು. ಹೈಕಳಿಗೆ ಇದೇ ಒಂದು ಹೊಸ ರೀತಿಯ ಕಿಕ್ಕು ಅನ್ನಿಸಬಹುದೇ? ಯಾರಿಗೆ ಗೊತ್ತು?! ರಾತ್ರಿ ಆಗುವ ಹೊತ್ತಿಗೆ ಉಮೇದು ಬಂದು “ಇಂದು ಇಂದಿಗೆ ನಾಳೆ ನಾಳೆಗೆ” ಅಂತ ಹೊರಡಬಹುದು…

ಸಧ್ಯಕ್ಕೆ, ನಲವತ್ತರಾಚೆಯ ಮಂದಿಗೆ, ಒಂದೆರಡು ಪೆಗ್ ಹಾಕುತ್ತಾ ಬರೆಯದ ಲೇಖನ, ಓದದ ಪುಸ್ತಕ, ಆಡದ ಮಾತು, ಆಡಿದ ಮಾತು, ಕಳೆದು ಹೋದ ಪ್ರೀತಿ, ಹಿಂತೆಗೆಯಲಾಗದ ತಪ್ಪು ಹೆಜ್ಜೆ, ಮಾತು ಕೇಳದ ಮಗಳು, ರಿಪೇರಿ ಮಾಡದ ನಲ್ಲಿ, ಒಂದನೇ ತಾರೀಕಿಗೂ ಹೋಗಬೇಕಾದ ಆಫೀಸು… ಹೀಗೆ ಅವರವರ ಭಾವಕ್ಕೆ ತಕ್ಕ ಜಾಡು ಹಿಡಿದು ದುಃಖಿಸುವ ಸುಖಕ್ಕಾಗಿ ಎರಡು ಪದ್ಯಗಳು.

As usual, ಸ್ವಂತದ್ದಲ್ಲ. ಅನುವಾದಗಳು.

ಡಿಸೆಂಬರ್ ಮೂವತ್ತೊಂದು

ಮಾಡಿಯೂ ಮಾಡದ ನನ್ನೆಲ್ಲ ಕೆಲಸಗಳು
ಬಟ್ಟೆ ಕಳಚಿಟ್ಟು
ಕ್ಯಾಲೆಂಡರಿನ ತುಂಬ ಗಸ್ತು ತಿರುಗುತ್ತಿವೆ.
ಅಲ್ಲಿಲ್ಲಿ ಅಂಡಲೆಯುವ
ನರಪೇತಲ ಬೇಡರು, ಬೇಡುವವರು,
ಹರಡುತ್ತಿರುವ ಹಿಮ…

ಹೊಸ ವರುಷದ ಮಡಿಕೆಯಲ್ಲಡಗಿದ
ಭವಿಷ್ಯದೆಡೆಗೆ ಮುಗ್ಗರಿಸಿ, ಗುಂಡುಸೂಜಿ ಚುಚ್ಚಿ
ಜನವರಿಯ ಹಾಳೆ ಭದ್ರ ಮಾಡುತ್ತೇನೆ
ಹದಿನೇಳನೆ ಶತಮಾನದ ಸ್ಥಿರ ಚಿತ್ರ :
ಒಂದು ತಲೆಬುರುಡೆ, ಒಂದು ಕನ್ನಡಿ
ಪರ್ಸಿನಿಂದ ಚೆಲ್ಲಿದ ಚಿಲ್ಲರೆ, ಒಂದು ಹೂವು.

ಮೂಲ: ರಿಚರ್ಡ್ ಹಾಫ್ ಮನ್

ಉರಿದು ಹೋದ ವರ್ಷ

ಅಕ್ಷರಗಳು ಕ್ಷಣಗಳಲ್ಲಿ ಸ್ವಾಹಾ
ಗೆಳೆಯರು ಬಾಗಿಲಿಗೆ ಅಂಟಿಸಿ ಹೋದ
ತೆಳ್ಳನ ಪುಟ್ಟ ಪಿಂಕ್ ಹಾಳೆ
ಪತಂಗದ ರೆಕ್ಕೆಯ ಹಾಗೆ
ಬುರಬುರನೆ ಉರಿದು ಮತ್ತೆ ಬರೀ ಗಾಳಿ

ವರ್ಷದಲ್ಲದೆಷ್ಟೋ ಉರವಲು
ದಿನಸಿಯ ಪಟ್ಟಿ, ಅರ್ಧ ಬರೆದ ಪದ್ಯಗಳು
ಎದ್ದೆದ್ದು ಕುಸಿವ
ಕೆನ್ನಾಲಿಗೆಯಂತ ದಿನಗಳು…
ಗಟ್ಟಿ ಕಲ್ಲುಗಳು ವಿರಳ

ಇದ್ದದ್ದು ಇದ್ದಕ್ಕಿದ್ದಂತೆ ಇಲ್ಲ
ಇಲ್ಲದ್ದು ಸೊಕ್ಕಿ, ಚೀರಾಡಿ ಜಾಗ ಖಾಲಿ ಮಾಡಿದ ಮೇಲೆ
ಸಣ್ಣ ಸಂಖ್ಯೆಗಳಿಂದ ಮತ್ತೆ ಲೆಕ್ಕ ಶುರು ಮಾಡಿದ್ದೇನೆ
ಒಂದು ಹೆಜ್ಜೆ ನೃತ್ಯ,
ಕೆಳೆದ, ಉಳಿದ ಎಲೆಗಳ ಆಟ

ಧಗಧಗ ಬೆಂಕಿ ಉರಿದು ಆರಿದ ಮೇಲೆ
ಚಟಪಟಗುಟ್ಟುತ್ತಿರುವುದು
ಮಾಡದ ಕೆಲಸಗಳ ಕೆಂಡ

ಮೂಲ: ನವೋಮಿ ಶಿಹಾಬ್ ನೈ

 

Comments (2)

ಕೆಲವನ್ನು ಹಿಡಿದು, ಹಲವನ್ನು ಬಿಟ್ಟು… ಗಾಲಿಬನ ಕೆಲ ದ್ವಿಪದಿಗಳು

ಗಾಲಿಬ್ ಪುಸ್ತಕ ಹಿಡಿದು ಕೂತಾಗ ಕೆಲವು ಸಾಲುಗಳನ್ನು ಕನ್ನಡದಲ್ಲಿ ಹೇಗೆ ಹೇಳಿದರೆ ಚೆಂದ ಇರಬಹುದು ಅಂತ ಅನ್ನಿಸುತ್ತಿದೆ. ಗಾಲಿಬನಂತಹ ಕ್ಲಿಷ್ಟ, ಪದದ ಜೊತೆ ನಾಜೂಕು ಆಟವಾಡುವ, ಅನೇಕ ಅರ್ಥಗಳನ್ನು ಒಂದೇ ಪದದಲ್ಲಿ ಹೊಳೆಸುವ (ನಮ್ಮ ಬೇಂದ್ರೆಯ ಹಾಗೆ!) ಕವಿಯನ್ನು ಬೇರೆ ಭಾಷೆಯಲ್ಲಿ ಅನುಕರಿಸುವುದು, ಅನುಸರಿಸಿವುದು, ಅನುವಾದಿಸುವುದು ಕಷ್ಟ. ಪದದ ಅರ್ಥ ಹಿಡಿದು ಹೊರಟಾಗ ಅದರ ಒಟ್ಟಂದ ತಪ್ಪಿಹೋದಂತೆಯಯೂ, ಒಟ್ಟಂದಕ್ಕೆ ಗಂಟು ಬಿದ್ದರೆ ಶಬ್ದಗಳ ಸತ್ಯ ನುಣುಚಿ ಹೋದಂತೆಯೂ ಅನ್ನಿಸುತ್ತದೆ. ಎಲ್ಲಾ ಅನುವಾದದ ಕಷ್ಟ ಇದೇ ಆದರೂ ಗಾಲಿಬನಂತವರಲ್ಲಿ ಇದು ನೂರ್ಮಡಿಯಾಗುತ್ತದೆ…

 

“ಎಷ್ಟಂದ್ರೂ ಒರಿಜಿನಲ್ ಥರ ಮಾಡಕ್ಕಾಗಲ್ಲ ಬಿಡಿ” ಅನ್ನುವ ಮೂದಲಿಕೆಗೆ ಹೆದರಿ ನನ್ನಂತ ಅನುವಾದಕರು ಬೇರೆಯವರು ಏನನ್ನೂ ಹೇಳುವುದಕ್ಕೆ ಮೊದಲೇ ತಮಗೆ ತಾವೇ ಚಾಟಿ ಏಟು ಕೊಟ್ಟುಕೊಳ್ಳುತ್ತಾ “ಸಾರಿ ಕಣ್ರೀ ಒರಿಜಿನಲ್ಲಿನ ಕಾಲು ಕಸವೇ ಇದು, ಅದರೂ ಪ್ಲೀಸ್ ಓದಿ!” ಅಂತ ಹೇಳುವುದುಂಟು. ಅಂಥದೇ ಒಂದು ಪ್ರಯತ್ನ ಇಲ್ಲಿದೆ. ಗಾಲಿಬನ ಕೆಲವು ದ್ವಿಪದಿಗಳನ್ನು ಅನುಸರಿಸುವ ಪ್ರಯತ್ನದ ಕನ್ನಡದ ಸಾಲುಗಳು.

* * *

ನೋಟಕ್ಕೆ ನೂರು ಬಣ್ಣ

ಹೊಳೆಯಲ್ಲಿ ಲೀನವಾಗುವುದು ಹನಿಗೆ ಆನಂದ
ಮೇರೆ ಮೀರಿದ ನೋವು ನೋವಿಗೆ ಮದ್ದು

ನನ್ನ ನಿನ್ನ ಮಿಲನ ಬೀಗ-ಕೀಲಿಯ ಹಾಗೆ
ಕೂಡಿದ ಮರುಗಳಿಗೆ ವಿರಹ ಹಣೆಬರಹ

ದಿನದಿನದ ಜಂಜಾಟಕ್ಕೆ ಸಿಕ್ಕು ನಲುಗಿದೆ ಹೃದಯ
ಉಜ್ಜುಜ್ಜಿ ಸಿಕ್ಕಾದ ಗಂಟು ಬಿಚ್ಚುವುದು ಕಠಿಣ

ಪ್ರೀತಿಯಿರಲಿ, ನಾನೀಗವನ ಹಿಂಸೆಗೂ ಪಾತ್ರಳಲ್ಲ
ಆ ಖದರಿನ ಒಲುಮೆ ಈ ಕಹಿಗೆ ತಿರುಗಿದ್ದು ಹೇಗೆ?

ಅಳುವ ಶಕ್ತಿ ಕಳೆದು ಹೋಗಿ ಬರೀ ನಿಟ್ಟಿಸಿರು ಉಳಿದಿದೆ
ಕುದಿದ ನೀರು ಆವಿಯಾಗಿ ತಣಿವುದರ್ಥವಾಗಿದೆ

ನಿನ್ನ ಬೆರಳ ನೇವರಿಕೆಯ ನೆನಪಳಿಸುವುದು ಕಷ್ಟ
ಚರ್ಮದಿಂದ ಉಗುರ ಸುಲಿದು ಬಿಸುಡುವ ಯಾತನೆ

ಮುಂಗಾರ ಮಳೆ ನಿಂತ ಈ ಶಾಂತ ನಿರ್ವಾತ
ಗೋಳಾಡಿ ಅತ್ತತ್ತು ಸುಸ್ತಾಗಿ ಸತ್ತು ಹೋದಂತೆ

ಹೂವಿನ ಗಂಧ ನಿನ್ನ ಮನೆಯ ದಾರಿ ಮರೆತಿದೆ
ಏರುವ ಧೂಳು ನಿನ್ನ ಅಂಗಳಕ್ಕೆ ದೌಡಿಟ್ಟಿದೆ

ನಿನ್ನ ತಾಕಲು ಕಾತರಿಸುವ ಕಾಡಗಂಧದ ಗಾಳಿ
ಈ ಮಳೆಗಾಲ ಕನ್ನಡಿಯ ಮುಖಕ್ಕೂ ಹಸಿರು ಬಳಿದಿದೆ

ಕೆಂಪು ಹೂವಿನ ರಂಗು ಎಲ್ಲೆಲ್ಲೂ ಚೆಲುವ ತುಂಬಿದೆ
ಹಸಿದ ನೋಟಕ್ಕೆ ನೂರು ಬಣ್ಣಗಳ ಒಡನಾಟ ಬೇಕಿದೆ

* * *

ಅನುವಾದದ ಅಂಕುಡೊಂಕು, ಅಂಕೆಶಂಕೆಗಳಿಗೆ ಅದ್ಯಾಕೋ ಮತ್ತೆ ಮತ್ತೆ ಮನಸ್ಸು ಮರಳುತ್ತಲೇ ಇರುತ್ತದೆ! ಮೂಲ ಮತ್ತು ಅನುವಾದದ ನಡುವಿನ ಸಂಬಂಧ ಎಷ್ಟು ವಿಚಿತ್ರ ಅನ್ನುವುದಕ್ಕೆ ಈ ಎರಡು ಸಾಲುಗಳ ಅನುವಾದದ ಉದಾಹರಣೆಗಳನ್ನು ನೋಡಿ:

ಮೂಲ ಸಾಲುಗಳು:

Taa kay tujh pur khulay eijaz e hawa-e-saiqqal
Deikh barsaat mein sabz aainay ka hoo jana

ತಾಕೆ ತುಜ್ ಪರ್ ಖುಲೇ ಐಜಾಜ್ ಎ ಹವಾ-ಎ-ಸಯ್ಕಲ್
ದೇಖ್ ಬರಸಾತ್ ಮೇ ಸಬ್ಜ್ ಆಯಿನಾ ಕ ಹೋ ಜಾನ

ಮೊದಲ ಅನುವಾದ:

So that you may be acquainted with the miracle of air, pure and clean
See in the monsoon, how, even the mirror turns green

ಎರಡನೆಯ ಅನುವಾದ:

We make the back of the mirror green in order to see our faces
Sometimes nature makes the front of the mirror green as well

ಮೂರನೆಯ ಅನುವಾದ:

So that you begin to understand the miracle of altering winds
You should see how the mirror becomes green in spring

ನಾಲ್ಕನೆಯ ಅನುವಾದ:

Would you riddle the miracle of the wind’s shaping?
Watch how a mirror greens in spring

ಐದನೆಯ ಅನುವಾದ:

In the spring the mirror turns green
Holding a miracle
Change the shining wind

ಗಾಲಿಬನ ಬಗ್ಗೆ ತುಂಬ ಚೆಂದದ ಪುಸ್ತಕ ಸಂಕಲನ ಮಾಡಿರುವ ಐಜಾಜ್ ಅಹಮದ್ ಈ “ಸಯ್ಕಲ್” ಪದಕ್ಕೆ ಅನುವಾದ ಹುಡುಕುವುದು ಕಷ್ಟ ಅಂತ ವಿವರಿಸುತ್ತಾರೆ. ಗಾಜಿನ ಬೆನ್ನಿಗೆ ಹಸಿರು ಮಿಶ್ರಣ (ತವರ ಮತ್ತು ಪಾದರಸದ ಮಿಶ್ರಣ) ಬಳಿದು ಕನ್ನಡಿ ಮಾಡುವ ಕ್ರಮಕ್ಕೆ ಈ ಹೆಸರಂತೆ. ಹೀಗಾಗಿ ಎರಡನೆಯ ಸಾಲಿನಲ್ಲಿ ಬರುವ ಹಸಿರಿನ ಪ್ರಸ್ತಾಪ ಉರ್ದು ಓದುಗರಿಗೆ ಮೊದಲ ಸಾಲಿನ ಜೊತೆ ವಿಶೇಷವಾಗಿ ಕನೆಕ್ಟ್ ಆಗುತ್ತದೆ, ಇದು ಅನುವಾದದಲ್ಲಿ ಸಾಧ್ಯವಿಲ್ಲ. ಹೀಗಾಗಿ ಇಲ್ಲಿರುವ ಎರಡನೆಯ ಅನುವಾದ ಮೂಲಕ್ಕೆ ತುಂಬ ದೂರ ಅನ್ನಿಸಿದರೂ ಈ ಹಸಿರನ್ನು ಇಂಗ್ಲಿಷಿಗೆ ತರುವುದರಲ್ಲಿ ಯಶಸ್ವಿಯಾಗಿದೆ… ಹೀಗೆ ಒಂದು ಹಿಡಿದರೆ ಇನ್ನೊಂದು ಬಿಟ್ಟು ಹೋಗುವುದು ಅನುವಾದದ ಪಾಡು.
P.S.: ಅನುವಾದದ ಮೊದಲ ಡ್ರಾಫ್ಟ್ ಓದಿದ ಎಂ.ಎಸ್. ಪ್ರಭಾಕರ ಅವರಿಗೆ ಥ್ಯಾಂಕ್ಸ್!

Comments (1)

ಬ್ಲೌಸು ಯಾಕೆ ಹಾಕಬೇಕು?

ಒಂದು ಸೀರೆ ಉಡುವ ಎಪಿಸೋಡಿನಿಂದ ಇನ್ನೊಂದು ಸೀರೆ ಉಡುವ ಎಪಿಸೋಡಿನ ನಡುವೆ ಒಂದು ಸುತ್ತು ದಪ್ಪ ಆಗುವುದು ಪ್ರಕೃತಿಯ ನಿಯಮ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಎಷ್ಟೇ ದಪ್ಪ ಆದರೂ ಕ್ಷಮಿಸಿ ಸಾವಧಾನವಾಗಿ ಸುತ್ತಿಕೊಳ್ಳುತ್ತದೆ ಸೀರೆ. ಆದರೆ ಈ ತರಲೆ ಬ್ಲೌಸು ಸೀರೆಗೆ ಸಿಕ್ಕಾಪಟ್ಟೆ ಕಾಂಟ್ರಾಸ್ಟು. ಎರಡನೆಯ ಪದರ ಚರ್ಮದೋಪಾದಿಯ ಈ ವಸ್ತ್ರ ಅರ್ಧ ಸೆಂಟೀಮೀಟರ್ ದೇಹದ ಸುತ್ತಳತೆ ಹೆಚ್ಚಾದರೂ ತೋಳ ಮೇಲೇರದೆ, ಹುಕ್ಕು ಹಾಕಿಕೊಳ್ಳಲು ಬಿಡದೆ, ಉಸಿರು ಕಟ್ಟಿಸಿ ಸ್ಟ್ರೈಕು ಮಾಡಿಬಿಡುತ್ತದೆ. ಈ ರಗಳೆ ಬಲ್ಲ ಕೆಲ ಜಾಣ ಟೈಲರುಗಳು ಬಿಚ್ಚಿ ಅಗಲ ಮಾಡಿಕೊಳ್ಳುಲು ಅನುಕೂಲ ಆಗುವ ಹಾಗೆ ಮೂರು ಎಕ್ಸಟ್ರಾ ಹೊಲಿಗೆ ಹಾಕಿರುತ್ತಾರೆ.
ಟೈಟಾದ ಬ್ಲೌಸು ತಿಂದ ಪ್ರತಿಯೊಂದು ಬಜ್ಜಿ ಬೋಂಡಾ ನೆನಪು ಮಾಡಿಕೊಳ್ಳುವಂಥ ಸಂದರ್ಭ ತಂದಿಟ್ಟಾಗೆಲ್ಲ “ಅಭಿಜ್ಞಾನ ಶಾಕುಂತಲಾ” ನಾಟಕದ ಮೊದಲ ಅಂಕ ನೆನಪಾಗುತ್ತದೆ. ಕಳ್ಳನ ಹಾಗೆ ಮರದ ಸಂದಿಯಿಂದ ಮೊದಲ ಬಾರಿ ದುಷ್ಯಂತ ಶಕುಂತಲೆಯನ್ನು ನೋಡುವ ದೃಷ್ಯ. ಸ್ನೇಹಿತೆ ಪ್ರಿಯಂವದೆ ವಲ್ಕಲವನ್ನು (ನಾರು ಬಟ್ಟೆ) ಎದೆಯ ಸುತ್ತ ತುಂಬ ಟೈಟ್ ಕಟ್ಟಿಬಿಟ್ಟಿದ್ದಾಳೆ, ಸ್ವಲ್ಪ ಸಡಿಲ ಮಾಡು ಅಂತ ಶಕುಂತಲೆ ಅನಸೂಯೆಯನ್ನು ಕೇಳುತ್ತಾಳೆ. ಆಗ ಪ್ರಿಯಂವದೆ ನನ್ನನ್ಯಾಕೆ ಬೈಯ್ಯುತ್ತೀಯ ಕಣೆ, ತಪ್ಪು ನಿನ್ನ ಉಕ್ಕುವ ಯೌವ್ವನದ್ದು ಅಂತ ನಗುತ್ತಾ ಹೇಳುತ್ತಾಳೆ. ತಕ್ಷಣ ಕ್ಯೂ ಕೊಟ್ಟ ಹಾಗೆ ನಮ್ಮ ದುಷ್ಯಂತ ತನ್ನ ಮಾಮೂಲಿ ಹೆಣ್ಣಿನ ವರ್ಣನೆಗೆ ಇಳಿದುಬಿಡುತ್ತಾನೆ. ದುಂಬಿ ಹೊಡೆಯುವ ಖ್ಯಾತಿಯ ಮಧ್ಯ ವಯಸ್ಕ ಹೀರೋಗೆ (ಅಲ್ಲಿಂದ ಇಲ್ಲಿಯವರೆಗೆ ಮುದಿಯಾಗುತ್ತಿರುವ ಹೀರೋಗಳಿಗೆ ಹದಿ ಹರೆಯದ ಹೀರೋಯಿನ್ನುಗಳೇ!) ಮರುಳಾದ ಆ ಶಕುಂತಲೆ ಅದು ಹೇಗೆ ಎಲ್ಲಿಗೆ ಯಾಕೆ ಕಟ್ಟಿಕೊಂಡಿದ್ದಳೋ ದೇವರೇ ಬಲ್ಲ. ನಮ್ಮ ಕ್ಯಾಲೆಂಡರ್ ಚಿತ್ರಗಳ ಪ್ರಕಾರವಂತೂ ಎದೆಗೆ ಒಂದು ಬಟ್ಟೆ ಸುತ್ತಿ ಹಿಂದೆ ಒಂದು ಗಂಟು ಬಿಗಿಯುವುದು ಆಗಿನ ಸ್ಟೈಲು. ಸಡಿಲ ಮಾಡಲು ಸರಾಗ. ಆ ಚಾಲಕಿ ಮಾತಿನ ಪ್ರಿಯಂವದೆ ಸ್ವಲ್ಪ ತುಪ್ಪ ಹಾಲು ಜಾಸ್ತಿಯಾಗಿ ಊದಿದ್ದೀ ಅಂತಲೇ ಶಕುಂತಲೆಗೆ ಹಿಂಟ್ ಮಾಡುತ್ತಿದ್ದಿರಬೇಕು ಅಂತ ನನ್ನ ಅನುಮಾನ. ಆದರೆ ಪೆದ್ದು ಸದಾಶಿವ ದುಷ್ಯಂತನಿಗೆ ಅದೇ ಧ್ಯಾನ ಆದ್ದರಿಂದ ಈ ಸೂಕ್ಷ್ಮಗಳು ಗೊತ್ತಾಗಿರಲಿಕ್ಕಿಲ್ಲ. ಆಗಿನ ದುಷ್ಯಂತನ ವರ್ಣನೆಯಿಂದ ಹಿಡಿದು ಈಗಿನ “ಚೋಲಿ ಕೆ ಪೀಚೆ”ಯವರೆಗೆ ಮಾಹಾ ಸೂಕ್ಷ್ಮಗೀಕ್ಷ್ಮ ಏನೂ ಇಲ್ಲ.

ಆ ಪುರಾಣ ಎಲ್ಲ ಹಾಗಿರಲಿ, ಈ ನಮ್ಮ ಸಧ್ಯದ ಸುತ್ತಳತೆ ಪ್ರಾಬ್ಲಮ್ ಪರಿಹರಿಸಲಿಕ್ಕೆ ನನ್ನ ಗೆಳತಿಯೊಬ್ಬಳು ಒಳ್ಳೆ ಉಪಾಯ ಕಂಡುಹಿಡಿದಿದ್ದಾಳೆ. ಟೈಟ್ ಆಗಿ ಹಾಕದೇ ಬಿಟ್ಟ ಟೀಶರ್ಟುಗಳನ್ನು ಸೀರೆಯ ಬ್ಲೌಸಿನ ಬದಲು ಹಾಕಿಕೊಳ್ಳುತ್ತಾಳೆ. ಈಗ ಮಾರ್ಕೆಟ್ಟಿನಲ್ಲಿ ಸ್ಟ್ರೆಚ್ ಆಗುವ ಬಟ್ಟೆಯ ಬ್ಲೌಸುಗಳೂ ಇವೆ. ಹಿಂದೆ ಲಾಡಿ ಕಟ್ಟುವ ರಾಜಾಸ್ಥಾನೀ ಸ್ಟೈಲಿನ ಬ್ಲೌಸುಗಳು, ಸ್ಪೆಗೆಟ್ಟಿ ಬ್ಲೌಸುಗಳು ಇವೆಯಾದರೂ ಅವನ್ನು ಹೆಚ್ಚು ಪಾಲು ಹಾಕಿಕೊಳ್ಳುವುದು ಊಟ ಬಿಟ್ಟು ಸೊರಗಿ ಸಣ್ಣಗಾದ ಜೀರೋ ಸೈಜ್ ಹುಡುಗಿಯರೇ ಅನ್ನುವುದು ವಿಪರ್ಯಾಸ! ಇನ್ನು ಶರ್ಟಿನ ಹಾಗೆ ದೊಗಳೆ ದೊಗಳೆ ಇದ್ದ ಬ್ಲೌಸುಗಳ ಕಾಲ ನಮ್ಮಜ್ಜಿಯ ಜೊತೆಗೇ ಮುಗಿದಿದೆ. ಒಟ್ಟಲ್ಲಿ “ಎಲಿಗೆಂಟ್” ಅಂತ ಕರೆಸಿಕೊಳ್ಳುವ ಬಹುಪಾಲು ಬ್ಲೌಸುಗಳು ಉಸಿರು ಕಟ್ಟಿಸುವ ಜಾತಿಯವೇ. “ಯಾರು ಕಂಡುಹಿಡಿದರು ಗೆಳತೀ ಇದೇನಿದು ಕವಚ ಕಂಚುಕ ಕಟ್ಟಿಡುವ ತವಕ, ಬಿಟ್ಟರೆ ಕುಹಕ…” ಅನ್ನುವ ಪ್ರತಿಭಾ ನಂದಕುಮಾರ್ ಸಾಲು ಸೀರೆ ಉಡುವಾಗೆಲ್ಲ ನೆನಪಾಗುತ್ತದೆ.

Read the rest of this entry »

Comments (2)

ಸರಳುಗಳ ತೂರಿ ಮೇಲೇರುವ ಕಾವ್ಯ…

ಹದಿಮೂರು ಧೀರ್ಘ ವರ್ಷಗಳು — ಅದರಲ್ಲೂ ಒಂದಷ್ಟು ಕಾಲ ಒಬ್ಬಂಟಿಯಾಗಿ ಸೆಲ್ಲಿನಲ್ಲಿ — ಕಳೆಯುವುದು ಹೇಗೆ? ಕಳೆದರೂ, ಧೈರ್ಯ ಮತ್ತು ಬರುವ ದಿನಗಳ ಬಗ್ಗೆ ಭರವಸೆ ಮುರುಟಿ ಹೋಗದಂತೆ ಕಾಯ್ದುಕೊಳ್ಳುವುದು ಹೇಗೆ?
Read the rest of this entry »

Comments (5)

ಪದ್ಯಗಳ ಅಸಲು, ಬಡ್ಡಿ ಇತ್ಯಾದಿ

ಯಾಕೆ ಒಂದು ಪದ್ಯ ಇಷ್ಟ ಆಗುತ್ತದೆ ಅಂತ ಹೇಳುವುದು ಎಷ್ಟು ಕಷ್ಟ ಅಲ್ಲವಾ? ಕೆಲವು ಪದ್ಯಗಳು ಮನದ ಭಾವವನ್ನು ಪದಗಳಲ್ಲಿ ಹೇಳಿಬಿಟ್ಟರೆ ಅದರ ಒಳಗೆ ಹುದುಗಿದ ನಾಜೂಕು ಅರ್ಥ ಒಡೆದು ನುಚ್ಚು ನೂರಾಗುತ್ತದೇನೋ ಅನ್ನುವ ತಮ್ಮ ಅತಿ ಸೂಕ್ಷ್ಮತೆಯಿಂದ ಚೆಂದ ಅನ್ನಿಸುತ್ತವೆ. ಆಹಾ ಇದೇ ನೋಡಿ ಪದ್ಯದ “ಅಸಲು” ಗುಣ ಅಂದುಕೊಳ್ಳುವಷ್ಟರಲ್ಲಿ ಇನ್ನೊಂದು ಪದ್ಯ ಬಂದು ನೇರ ನೇರ ಗುಂಡು ಹಾರಿಸಿದ ಹಾಗೆ ಮಾತಾಡಿ ನಾವು ಕಂಡುಕೊಂಡ ಅಸಲು ಬಡ್ಡಿ ಎಲ್ಲವನ್ನೂ ಹುಡಿ ಮಾಡಿಬಿಡುತ್ತದೆ! ಇದು ಯಾವತ್ತೂ ಬಗೆ ಹರಿಯದ, ಅನೇಕಾನೇಕ ಜಗಳಗಳಿಗೆ ಗ್ರಾಸ ಒದಗಿಸಿದ ಹಳೆಯ ಜಿಜ್ಞಾಸೆ….

Read the rest of this entry »

Comments (3)

Older Posts »